ಹೀಗಿತ್ತು ಅವಳ ಸ್ವಗತ…

-ಲೀಲಾ ಸಂಪಿಗೆ

ಎಲ್ಲವೂ ವ್ಯವಸ್ಥೆಯಾಗಿತ್ತು. ಜೀವ ದಣಿದಿತ್ತು. ಅಂತಿಮ ಅಗ್ನಿ ಸ್ಪರ್ಶದೊಂದಿಗೆ ತನ್ನ ಬದುಕೇ ಮುಗಿದುಹೋದ ಭಾವವಿತ್ತು ಸುಶೀಲಳ ಮುಖದಲ್ಲಿ. ಸುಶೀಲಳ ಮಗಳು ಶಾರೀ ಅಗ್ನಿಯಲ್ಲಿ ಲೀನವಾಗಿದ್ದಳು. ಸುಶೀಲ ಆ ಕೆನ್ನಾಲಗೆ ನೋಡ್ತಾ ಮಂಡಿಯೊಳಗೆ ಮುಖವಿಟ್ಟಳು ಧ್ಯಾನಕ್ಕೆ ಕುಳಿತವಳಂತೆ.
ಅಲ್ಲೇ ಸ್ವಲ್ಪ ದೂರದಲ್ಲಿದ್ದ ಬಂಡೆಯೊಂದರ ಮೇಲೆ ಕುಳಿತೆ. ಶಾರೀ ನನ್ನ ಕಣ್ಣೆದುರು ಬಂದಳು. ಕೃಷ್ಣ ಸುಂದರಿ. ಆರೋಗ್ಯವಾಗಿದ್ದ ಆ ದೇಹಕ್ಕೆ ಹರೆಯದ ಮಿಂಚು. ಆ ಮುಗ್ಧತೆಯ ಮುಖ ಮುದ್ರೆ ಶಾಂತ.

ಸೊಣ್ಣಹಳ್ಳಿಪುರದ ಕೆನರಾಬ್ಯಾಂಕ್ ಪ್ರಾಯೋಜಿತ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆ ಕಟ್ಟಡದಲ್ಲಿ ಲೈಂಗಿಕವೃತ್ತಿ ಮಹಿಳೆಯರ ನಾಯಕತ್ವ ತರಬೇತಿ ಶಿಬಿರ ನಡೀತಾ ಇತ್ತು. ಸಂಜೆ ಪರಸ್ಪರ ವೈಯಕ್ತಿಕ ವಿಚಾರಗಳ ಹಂಚಿಕೆಯಿತ್ತು. ಇದ್ದಕ್ಕಿದ್ದಂತೆ ಸುಶೀಲಾ ತನ್ನ ಮಗಳು ಶಾರೀಗೆ ಮದ್ವೆ ಗೊತ್ತು ಮಾಡಿರೋ ವಿಚಾರ ತಿಳಿಸಿದ್ಲು. ಇಡೀ ಹಾಲ್ ಬೆಚ್ಚಿ ಬೀಳೋ ಹಂಗೆ ಎಲ್ಲರೂ ಹೋ ಅಂತ ಖುಷಿ ಹಂಚ್ಕೊಂಡ್ರು. ಶಾರೀ ಹುಟ್ಟಿದ ಹನ್ನೊಂದನೇ ದಿನವೇ ಮೆಜೆಸ್ಟಿಕ್ನ ರಸ್ತೆಗೆ ಅಮ್ಮನೊಂದಿಗೆ ಬಟ್ಟೆ ಸುತ್ತಿಕೊಂಡು ಮಾಂಸದ ಮುದ್ದೆಯಂತೆ ಕಿಚಿಪಿಚಿ ಅಂತ ಬಂದೋಳು. ಅವಳ್ ಬಿಟ್ಟು, ಇವಳ್ಬಿಟ್ಟು, ಅಮ್ಮ ನಂಬಿಟ್ಟು… ಅನ್ನೋಹಾಗೆ ಎಲ್ಲರ ಕೈಯಲ್ಲಿ ಬೆಳೆದವಳು. ಅಮ್ಮ ಗಿರಾಕಿಯೊಂದಿಗೆ ಹೋಗಿ ಬರುವಷ್ಟರ ಹೊತ್ತು ಇನ್ನಾರದೋ ಕೈಯ್ಯಲ್ಲಿರ್ತಾ ಇದ್ಲು. ಯಾರೂ ಇಲ್ಲದಿದ್ದರೆ 20 ರೂಪಾಯೀನ ಪಿಂಪ್ ಮಾದನ ಕೈಯಲ್ಲೇ ಇಟ್ಟು ಸುಶೀಲ ಹೋಗ್ಬಿಡ್ತಿದ್ಲು.

ಹೀಗೆ ಬೆಳೆದು ದೊಡ್ಡವಳಾದ ಶಾರೀ ಮದ್ವೇನ ಸಂಸ್ಥೆಯ ಎಲ್ರೂ ಸೇರಿ ಮಾಡೋ ನಿಧರ್ಾರ ಆಯ್ತಲ್ಲ.
ಆ ಸಂಸ್ಥೆಯ ನಿದರ್ೆಶಕರಾಗಿದ್ದ ಯರ್ರಿಸ್ವಾಮಿಯವರು ತಾಳಿ ಕೊಡಿಸೋಕೆ ಒಪ್ಪಿದ. ವಿಜಿ ಮದ್ವೆ ಸೀರೆ ಕೊಡಿಸೋಕೆ ಒಪ್ಪದ ಸಹನಾ ಕಾಲುಂಗುರ, ರಾಧಿಕಾ ಮುನ್ನೂರು ರೂಪಾಯಿ ಕೊಡ್ತೀನಿ ಅಂದ್ಲು. ಕಾಲಂದುಗೆ, ಸಾಧಾರಣ ಬಟ್ಟೆಗಳು, ಅವಳಿಗೊಂದು ಸೂಟ್ಕೇಸ್…ಹೀಗೇ ಎಲ್ಲವನ್ನೂ ನನ್ನ ಸಹಾಯಕ ವೇಣು ಪಟ್ಟಿ ಮಾಡಿಯೇ ಬಿಟ್ರು. ಮದುವೆ ನಂತರ ಒಂದು ಊಟದ ವ್ಯವಸ್ಥೇನ ಶಾರೀ ಅಮ್ಮ ಸುಶೀಲ ಮತ್ತು ನಾನು ಮಾಡೋದು ಅಂತ ಆಯ್ತು.

ಹುಡುಗ ಅನಾಥ ಅಂತ ಗುಸುಗುಸು ಅಂತಿದ್ರೂ ಸುರೇಶ ಶಾರೀಗೆ ತಕ್ಕನಾದವ ಎಂದು ಎಲ್ಲರಿಗೂ ಅನ್ನಿಸಿತ್ತು. ತನ್ನ ಬದುಕಿನ ಬಾಗಿಲಿಗೂ ಪ್ರವೇಶಿಸದ ಬದುಕು ತನ್ನ ಮಗಳಿಗೆ ಸಿಕ್ಕಿತು ಅಂತ ಸುಶೀಲ ಹಿಗ್ಗಿದ್ದಳು. ಹೆಜ್ಜೆಹೆಜ್ಜೆಗೂ `ಸೂಳೆ ಸೂಳೆ’ ಅಂತ ಮೂದಲಿಸಿಕೊಂಡೇ ಉಸಿರಾಡಿದ್ದ ಸುಶೀಲಳಿಗೆ ತನ್ನ ಮಗಳು ಯಾವ ಮೈಲಿಗೆಯೂ ಇಲ್ಲದೆ ಗೃಹಿಣಿಯಾದದ್ದು, ಧರ್ಮಪತ್ನಿಯಾದದ್ದು ಇವೆಲ್ಲ ಬದುಕಿನಲ್ಲಿ ಅದೆಂಥದೋ ಹೊಸತನ ತಂದೊಡ್ಡಿತ್ತು. ದಣಿವಾಗುವಷ್ಟು ದುಡಿದರೂ ಲೆಕ್ಕಿಸದ ಸುಶೀಲಾ ಶಾರೀಗೆ ಒಂದು ಪುಟ್ಟ ಮನೆಯನ್ನೂ, ಬದುಕನ್ನೂ ಜೋಡಿಸಿಕೊಟ್ಟಳು.

ಆದ್ರೆ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮಿಂಚು ಮಾಯವಾಗ್ತಾ ಬಂತು. ಬದುಕೊಳಗೆ ಹೊಗೆಯಾಡೋಕೆ ಶುರುವಾಯ್ತು. ಗಂಡ ಕೆಲ್ಸಕ್ಕೆ ಹೋಗೋದು ನಿಲ್ಸಿದ್ದ. ಕುಡಿತವೂ ಅವನಿಗೆ ಗೊತ್ತು ಅನ್ನೋದು ಶಾರೀಗೆ ಗೊತ್ತಾಯ್ತು. ಕೆಲಸಕ್ಕೆ ಹೋಗು ಅಂತ ಗಂಡನನ್ನು ಒತ್ತಾಯಿಸಿದಾಗ ಅವನು ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. `ನಿಮ್ಮಮ್ಮನ್ನ ತಂದ್ಹಾಕು ಅಂತಹೇಳು. ಒಬ್ಬ ಬೀದಿಸೂಳೆ ಮಗಳನ್ನು ನಾನು ಕೈ ಹಿಡಿದು ಜೀವನ ಕೊಟ್ಟಿಲ್ವ?’ ಎಂದಾಗ ಶಾರೀ ಬದುಕಿಗೇ ಬರಸಿಡಿಲು ಬಡಿದಿತ್ತು. ಉದ್ದಕ್ಕೂ ಇಂಥೋಳ ಮಗಳು ಅಂತ ಅನುಭವಿಸಿ ಬಂದ ಎಲ್ಲ ನೆನಪುಗಳು ರಾಚಿದವು. ಈ  ಸಂಸಾರ ಮರೀಚಿಕೆ, ತನಗೆಟುಕದ್ದು ಅನ್ನೋ ವಾಸ್ತವ ಶಾರಿಯನ್ನು ಕಂಗಾಲಾಗಿಸಿತ್ತು.

ಅದೊಂದು ದಿನ ಸುಶೀಲ ಮಾತಾಡ್ತಾ ನನ್ನೊಂದಿಗೆ ಶಾರೀಯ ಬದುಕಲ್ಲಿ ಸಾಮರಸ್ಯ ಬಿರುಕು ಬಿಟ್ಟ ಬಗ್ಗೆ ಹೇಳ್ಕೊಂಡು ಅತ್ಲು. ಆದರೂ ಎದೆಗುಂದದ ಸುಶೀಲಾ ಹೇಗಾದರೂ ತನ್ನ ಮಗಳ ಬದುಕನ್ನು ಹಸನುಗೊಳಿಸಲು ಉಸಿರುಗಟ್ಟಿ ದುಡಿದಳು. ಒಮ್ಮೆ ಎಲ್ಲವೂ ಸರಿಹೋದಂತೆ ಭಾಸವಾಗ್ತಿತ್ತು. ಮತ್ತೊಮ್ಮೆ ಸೌಧವೇ ಉರುಳಿಹೋಗಿಬಿಡುವ ಅಪಾಯ ಕಾಡ್ತಿತ್ತು. ಇನ್ನೂ ಚಿಕ್ಕ ವಯಸ್ಸು, ಎಲ್ಲವೂ ಸರಿಹೋಗುತ್ತೆ ಅಂತ ಸಮಾಧಾನಿಸಿಕೊಳ್ಳುತ್ತಿದ್ದಳು ಸುಶೀಲ.

ಊಹುಂ! ಸರಿಹೋಗಲೇ ಇಲ್ಲ. ಸುಶೀಲ ಮಾಡಿದ ಎಲ್ಲ ಪ್ರಯತ್ನಗಳೂ ಕಡಲತೀರದ ಮರಳ ಗುಡ್ಡೆಯ ಗೂಡುಗಳಂತಾಯ್ತು! ಈ ಕಳಂಕವನ್ನೇ ಬ್ಲಾಕ್ಮೇಲ್ ತಂತ್ರ ಮಾಡ್ಕೊಂಡ ಸುರೇಶನ ಕುಡಿತ ಮಿತಿಮೀರಿತ್ತು. ನೆಪ ಸುಶೀಲಳಾಗಿದ್ದಳು. ಆ ಅಮಲಲ್ಲೇ ಆ ಕೃಷ್ಣಸುಂದರಿ ಶಾರೀಯ ಮೈಗೆ ಸೀಮೆಎಣ್ಣೆ ಎರಚಿ ಗೀಚಿದ ಬೆಂಕಿಕಡ್ಡಿಯಿಂದ ತನ್ನ ಬೀಡಿ ಹೊತ್ತಿಸಿಕೊಂಡ ಸುರೇಶ ಉಳಿದ ಕಡ್ಡಿಯ ಪುಟ್ಟ ಬೆಂಕಿಯನ್ನು ಶಾರಿಯೆಡೆಗೆ ಎಸೆದುಬಿಟ್ಟಿದ್ದ.
ಇದನ್ನೆಲ್ಲ ಕೇಳಿ ಮನಸ್ಸು ಭಾರವಾಯ್ತು. ಸುಜಾತ, ವಿನ್ನಿ, ಯಶೋದ ಎಲ್ಲರಿಗೂ ಅಲ್ಲಿಗೆ ಹೋಗೋಣ ಅಂತ ಹೇಳ್ದೆ. ಸುಶೀಲಳನ್ನೂ ಕರ್ಕೊಂಡು ವಿಕ್ಟೋರಿಯಾ ಆಸ್ಪತ್ರೆಯ ಪಾರ್ಕಲ್ಲಿ ಕುಳಿತ್ವು. ಟೀ ತರ್ಸಿ ಸುಶೀಲಳಿಗೆ ಕೊಟ್ಟೆ. ಕಟ್ಟಿಕೊಂಡಿದ್ದ ದುಃಖ ಮೌನ ಒಡೆದು ಆಕ್ರಂದನ ಮಾಡ್ತು. `ಅತ್ತುಬಿಡು ಸುಶೀ, ಹಗುರಾಗ್ತೀಯಾ’ ಅಂದೆ. ನನಗೂ ಅತೀವ ನೋವಾಗಿತ್ತು. ಇವರು ಮನುಷ್ಯರಾಗಿ, ಸಹಜವಾಗಿ ಬದುಕೋಕೆ ಒಂದು ಐಡೆಂಟಿಟಿ ಹುಡುಕೋ ಯತ್ನದಲ್ಲಿ ಅವರೊಂದಿಗೆ ನಾನೂ ಸೋತು, ಸೋತು, ನಿರಾಶಳಾಗ್ತಿದ್ದೆ. ಹಾಗೆ ನಿರಾಶೆಯಾದಾಗಲೆಲ್ಲಾ ಅವರ ಕಣ್ಣೀರಲ್ಲಿ
ನಾನೂ ಸೇರ್ಕೊಂಡ್ ಬಿಡ್ತಿದ್ದೆ. ಇದ್ದಕ್ಕಿದ್ದಂತೆ, `ಅಮ್ಮಾ’ ಎಂದಳು ಸುಶೀಲ. ಅವರೆಲ್ಲರೂ ವಯಸ್ಸಿನ ಅಂತರವಿಲ್ಲದೆ ನನ್ನನ್ನು `ಅಮ್ಮಾ’ ಅಂತಲೇ ಸಂಬೋಧಿಸು ತ್ತಿದ್ದುದು. `ಶಾರೀ ಹೆಣವೂ ಕೂಡ ನನ್ನ ದೇಹದ ಕಿಮ್ಮತ್ತಿನ ಕಾಸನ್ನ ಬೇಡಿ ಬಿಡ್ತಮ್ಮ, ನೀನು ಅಂದ್ಕೊಂಡಿರೋ
ಹಾಗೆ ಯಾರ್ಯಾರೋ ನನ್ನ ಜೊತೆ ಕೈ ಜೋಡಿಸ್ಲಿಲ್ಲ. ಪಾಷಾ, ಶೇಖರ, ಮುನ್ನಿ ಎಲ್ರೂ ಬಂದಿದ್ರು. ಇಂಥಾ ಟೈಮಲ್ಲೂ ಅವರೆಲ್ಲಾ ಕೈ ಚೆಲ್ಲಿ ಬಿಟ್ರು. ಈಗ ಬರ್ತೀವಿ ಅಂಥ ಹೋದೋರು ಯಾರೂ ಬರ್ಲೇ ಇಲ್ಲಮ್ಮ. ಇಷ್ಟುದಿನ ನನ್ನನ್ನೇ ಹಿಡಿಹಿಡಿಯಾಗಿ ತಿಂದೋರು’ ಅಂತ ಕರುಳು ಕಿತ್ತು ಬರೋ ಸಂಕಟದ ಬುತ್ತಿಯನ್ನು ಸುಶೀಲ ಬಿಚ್ಚಿ ಬಿಟ್ಲು. ನಾನು ಮೂಕಳಾದೆ. ಸುಶೀಲ ಮಗಳನ್ನು ಶವಾಗಾರದಿಂದ ಹೊರತರಲು ಹಣ ಹೊಂಚಿದ ಪರಿಯನ್ನು ಅವಳ ಬಾಯಿಂದಲೇ ಕೇಳಿದೆ.

ಹೀಗಿತ್ತು ಅವಳ ಸ್ವಗತ:
`ಬಂದು ಸಾಂತ್ವನ ಹೇಳಿ ಹೋದವರು ಹಿಂದಿರುಗಿ ಬಾರದಾಗ ಪರಿಸ್ಥಿತಿ ಅರಿವಾಯ್ತು ನನಗೆ. ಮುಸ್ಸಂಜೆಯಾಗ್ತಿತ್ತು. ಅವಸರವಸರವಾಗಿ ತನ್ನ ಕೆಲಸ ಮುಗಿಸಿ ಹೊರಟವನಂತೆ ಸೂರ್ಯ ಕ್ಷಣಕ್ಷಣಕ್ಕೂ ಇಳಿಯತೊಡಗಿದ್ದ. ಬೆಳಕು ದುಪ್ಪಟ್ಟಿತ್ತು. ಬೆಳಕಿನ ಭ್ರಮೆ ಕಳೆದು ನನ್ನ ಜಗತ್ತು ಮಸುಕು ಮಸುಕಾಗಿತ್ತು. ಈ ವಾತಾವರಣವೇ ದಟ್ಟ ಕತ್ತಲಿಗೆ ನನ್ನನ್ನು ಒಡ್ಡುವುದು ಎಂಬುದರ ಅನುಭವ ನನ್ನನ್ನು ಎಚ್ಚರಿಸಿತು. ಬರೀ ದೇಹದ ಮಸಲ್ಸ್ಗಳನ್ನೇ ಮಾರಿದ ನನಗೆ ಹೆಣವನ್ನೂ ಕೊಳ್ಳಬೇಕಾಗಬಹುದಾದ ಕಲ್ಪನೆಯೂ ಸುಳಿದಿರಲಿಲ್ಲ. `ನನ್ನ ಒಡಲಕುಡಿಗೆ ನಾನೇ ತೆರಬೇಕಾದ ತೆರವನ್ನು ಹೊಂಚೋದಾದ್ರೂ ಹೇಗೆ?’ ಎನ್ನಿಸಿ ಎದ್ದು ನಿಂತೆ. ಸೀದಾ ರಸ್ತೆಗಿಳಿದೆ. ಮೆಜೆಸ್ಟಿಕ್ ಅಲೋಕ ಹೋಟೆಲಿನ ತಿರುವಿನ ಕಿರುದಾರಿಯ ಗೂಡಂಗಡಿಗೆ ಹೋದೆ. ಮಾಣಿಕ್ಚಂದ್ ಪೊಟ್ಟಣ ಒಡೆದು ಬಾಯಿಗೆ ಸುರುವಿಕೊಂಡೆ. ಮೂರನೇ ಗಲ್ಲಿಯಲ್ಲಿ ಶ್ರೀರಾಮ ವೈನ್ ಸ್ಟೋರಿನ ಮುಂಭಾಗದಲ್ಲಿ ನಿಂತೆ. ಅಂಗಡಿ ಮಾಲೀಕ ನಾರಾಯಣ ಪ್ರಶ್ನಾರ್ಥಕವಾಗಿ ನೋಡ್ದ. ಒಂದು ಪೆಗ್ ಕೊಡಣ್ಣ ಅಂದೆ. ಗಟಗಟನೆಸುರುವಿಕೊಂಡೆ. ಗಂಟಲು, ಎದೆ, ಹೊಟ್ಟೆ…ದಹಿಸ್ಕೊಂಡೇ ಒಳಸೇರ್ತು. ಹಾಗೇ ಹೊರಟೆ. ನಾರಾಯಣ ಅವಾಜ್ ಹಾಕ್ತಾನೇ ಇದ್ದ. `ಬರೋವಾಗ ದುಡ್ಡು ಕೊಟ್ಹೋಗು, ಮುಂಡೇವು ಕುಡೀದೇ ಇದ್ರೆ ಸೆರಗು ಬೀಳೋಲ್ಲ, ಸೆರಗು ಬೀಳ್ದೆ ದುಡ್ಡು ಕೊಡೋಲ್ಲ’ ಅಂತ ಗೊಣಗ್ತಾನೇ ಇದ್ದ. ಹಾಗಂತ ಗೊಣಗ್ತಾನೇ ಆತ ಅದೆಷ್ಟು ಸೆರಗುಗಳ ಸಂದಿಯ ನೋಟುಗಳನ್ನ ಎಣಿಸಿದ್ದಾನೆ ಅನ್ನೋದು ದಿನದಿಂದ ದಿನಕ್ಕೆ ಹೆಚ್ಚೋ ಅವನ ದವಲತ್ತು ನೋಡಿದ್ರೇ ಹೇಳ್ಬಹುದು.

`ರಂಭಾ ಥಿಯೇಟರಿನ ಗಲ್ಲಿಗಿಳಿದೆ. ಅದೆಷ್ಟು ವರ್ಷಗಳ ಪರಿಚಿತ ಸ್ಥಳ. ಆ ಗಲ್ಲಿಯ ಅಡಿಯಡಿಯ ಇತಿಹಾಸದ ಪರಿಚಿತಳು ನಾನು. ಎದುರಿಗೆ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ಬಂದು ನಿಂತ. ಅವನೇ ಬೆರಳುಗಳ ಅಂಕಿ ಸೂಚಿಸಿದ. ಏನೂ ಪ್ರತಿಕ್ರಿಯಿಸದೆ ಅವನ ಹಿಂದೆ ನಡೆದೆ. ಅವನೇನೋ ಮಾತಾಡ್ತಾನೇ ಇದ್ದ. ಸಪ್ತಪದಿಯವಳೊಂದಿಗೆ ಎಂದೂ ಬೆತ್ತಲಾಗದ ತಾಕತ್ತಿಲ್ಲದವನು ನನ್ನಲ್ಲಿ ಆ ಭ್ರಮೆಗಳನ್ನು ಹುಟ್ಟಿಸ್ತಾನೇ ಇದ್ದ. ನನ್ನೊಡಲು ಮಾತ್ರ ಅಸಾಧ್ಯವಾದ ನೋವನ್ನು ಒಸರುತ್ತಿತ್ತು. ಅವನು ತೃಷೆಯ ಉತ್ತುಂಗದಲ್ಲಿ ತನ್ನೊಂದಿಗೆ ಬರಲು ರಮಿಸುತ್ತಲೇ ಇದ್ದ. ಕೊನೆಗೂ ನಿಸ್ತೇಜನಾದ. ಮಾತಾಡಿ ಬಂದದ್ದು ಇಡೀ ರಾತ್ರಿಗೆ, ಅರ್ಧ ಗಂಟೆಗೇ ಅವನ ಪೌರುಷ ಮುಗಿದಿತ್ತು. ಕಾವಿಳಿದ ಮೇಲೆ ಭರವಸೆಗಳೂ ಇಲ್ಲ. ಭ್ರಮೆಯೂ ಇಲ್ಲ. ಗಾಢನಿದ್ರೆಗೆ ಹೋದ ಹೆಣದಂತೆ!

`ದೇಹ, ಮನಸ್ಸು, ಬದುಕು ಎಲ್ಲವೂ ಚಿಂದಿಚಿಂದಿ. ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ನನ್ನ ಜೊತೆ ನಡೆದವರು, ಕಸಿದವರು, ತಿಂದವರು, ಕುಡಿದವರು, ನನ್ನನ್ನೇ ಹೀರಿದವರು…ಲೆಕ್ಕವಿಲ್ಲದಷ್ಟು. ನೀರವತೆ ನನ್ನೊಂದಿಗಿತ್ತು. ಎಷ್ಟು ಬೇಡೆಂದರೂ ನಾನು ದುಡಿದುಡಿದು ಹಾಕಿದ ನೋಟುಗಳ ಲೆಕ್ಕ ಮಾಡುವ ವ್ಯರ್ಥ ಪ್ರಯತ್ನವನ್ನ ನನ್ನ ಮನಸ್ಸು ಮಾಡುತ್ತಲೇ ಇತ್ತು. ಎಂದೂ ಲೆಕ್ಕಕ್ಕೇ ಸಿಗದ ಆ ಕಾಂಚಾಣ ಸೊನ್ನೆ ಸೊನ್ನೆಗಳನ್ನು ಮಾತ್ರ ಸುತ್ತಿಸುತ್ತಿ ನನ್ನ ಮುಂದೆ ಗುಡ್ಡೆ ಹಾಕ್ತಿತ್ತು. ಗಳಿಸಿದ್ದೆಲ್ಲವೂ ದಕ್ಕಿದ್ದಾದರೂ ಎಲ್ಲಿ? ಇಂಥಾ ಅದೆಷ್ಟು ಪಾಷಾ, ಶೇಖರ, ಮುನ್ನಿಯಂತಹವರು ನುಂಗಿ ನೀರು ಕುಡಿದಿದ್ದರು. ಬೆತ್ತಲಾದ ಕತ್ತಲಾಟದಲ್ಲಿ ಬೆವರಿಳಿಸಿಕೊಂಡವರು ಕೊಟ್ಟಿದ್ದೂ ಲೆಕ್ಕವಿಲ್ಲ. ಬೆತ್ತಲೆ ದೇಹಕ್ಕೆ ಸೀರೆ ಸುತ್ತುವ ಮುನ್ನವೇ ಕಸಿದುಕೊಂಡ ಹದ್ದುಗಳದ್ದೂ ಲೆಕ್ಕವಿಲ್ಲ. ಎಷ್ಟು ರಾಶಿ ಸೊನ್ನೆಗಳಿದ್ದರೂ ಗುಣಿಸಿದ್ದು ಸೊನ್ನೆಯಿಂದಲೇ ಆದಾಗ ಎಲ್ಲವೂ ಶೂನ್ಯವಾಯ್ತು.’ಶಾರಿಯೆಂಬ ಬೆಳಕೂ ಕತ್ತಲೆಯಾಯಿತು.

‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್’

-ಲೀಲಾ ಸಂಪಿಗೆ

ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ! ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ. ಒಂದೊಂದು ಗುಂಡಿಗಳಿಗೂ ನೆರಳು ಕೊಡುವ ಭ್ರಮೆಯಲ್ಲಿ ನಿಂತಿವೆಯೇನೋ ಎಂಬಂತೆ ನಿಂತ ಪೋಸ್. ಪ್ರತಿ ಗುಂಡಿಯ ಒಳಗಡೆ ಹಾಸಿರುವ ಸೀರೆ ಅಥವಾ ದುಪ್ಪಟಗಳು. ಇದು ತನ್ನದೇ ಗುಂಡಿ ಎಂದು ಖಡಕ್ಕಾಗಿ ಹೇಳೋಕೆ ಒಂದು ಐಡೆಂಟಿಟಿ.

ಇದೇನು ಸ್ಮಶಾನ ವರ್ಣನೆ ಮಾಡ್ತಿದ್ದೀನಿ ಅಂದ್ಕೊಂಡ್ರಾ? ಮೊದಲ ಆ ದಿನ ಅಲ್ಲಿಗೆ ಕಾಲಿಟ್ಟಾಗ ನಾನೂ ಹೀಗೆ, ಅವಾಕ್ಕಾದೆ. ನನ್ನನ್ನು ಅಲ್ಲಿಗೆ ಕರ್ಕೊಂಡ್ಹೋಗಿದ್ದ ಗೀತಾಳನ್ನು ಹಾಗೇ ಕೇಳ್ದೆ, ಅದಕ್ಕವಳು ‘ ಸ್ಮಶಾನದ ಗುಂಡಿ ಇನ್ನೂ ಆಳ ಇರುತ್ತೆ, ಇವುಗಳು ಅಷ್ಟೊಂದು ಆಳವಿಲ್ಲ. ಅಷ್ಟೇ ವ್ಯತ್ಯಾಸ’ ಅಂದ್ಲು.

ಒಂದೊಂದು ಗುಂಡಿ ಹತ್ರಾನೂ ಹೋದೆ. ಗುಂಡಿಯೊಳಗಿನ ಬಣ್ಣ ಬಣ್ಣದ ಗುರುತುಗಳನ್ನು ನೋಡ್ದೆ. ಒಂದಕ್ಕೂ ಇನ್ನೊಂದಕ್ಕೂ ಹತ್ತು-ಹನ್ನೆರಡು ಅಡಿ ಅಂತರ. ಅದೇ ಜಾಲಿಗಳು ಒಂದಿಷ್ಟು ಅಡ್ಡ ನಿಂತು ಆ ಗುಂಡಿಗಳಿಗೆ ಒಂದು ಪ್ರೈವೆಸಿ ತಂದುಕೊಟ್ಟಿವೆ.

ಪರಸ್ಪರ ವ್ಯವಹಾರ ಕುದ್ರಿಸ್ಕೊಂಡು ಅಲ್ಲಿಗೆ ಬರ್ತಾರೆ. ಹಾಸಿರೋ ಬಟ್ಟೆ ಕೊಡವಿದ್ರೆ ಸಾಕು ಶಯ್ಯಾಗಾರ ರೆಡಿ. ಒಂದೊಂದು ಗುಂಡಿಗೂ ಒಂದೊಂದು ಪ್ಯಾಕೆಟ್ ಕಾಂಡೂಮ್ ಹಾಕಿ ಬಂದ್ಲು ಗೀತಾ. ನಾನೊಂದು ಐಡಿಯಾ ಕೊಟ್ಟೆ. `ಹೀಗೆ ಹಾಕಿ ಬಂದ್ರೆ ಸೇಫ್ ಅಲ್ಲ, ಒಂದೊಂದು ಗುಂಡಿಯಲ್ಲೂ ಒಂದೊಂದು ದೀಪದ ಗೂಡಿನ ಥರಾ ಮಾಡಿ ಅದ್ರೊಳಗೆ ಕಾಂಡೂಮ್ ಇಡಬಹುದು. ಮಳೆ, ಬಿಸಿಲುಗಳಿಂದ್ಲೂ ರಕ್ಷಿಸ್ಬಹುದು’ ಅಂದೆ. ಈ ಕಾಂಡೂಮ್ ಕೆಲಸದಲ್ಲಿ ರೋಸಿಹೋಗಿದ್ದ ಗೀತಾ, ‘ಹೌದಮ್ಮ, ಅದೊಂದು ಬಾಕಿ,  ಅಷ್ಟೊಂದು ಅನುಕೂಲ ಮಾಡೋಳು ನೀನೆ ಬಂದು ಹಾಕ್ಬಿಡು ಅಂತಾರೆ ಅಷ್ಟೆ’ ಅಂತ ಕಿಚಾಯಿಸಿದ್ಲು. ಅಲ್ಲಿದ್ದ ಒಂದಷ್ಟು ಹುಡಿಗೀರ್ನ ಮಾತಾಡ್ಸಿದ್ವು. ಗೀತಾ ಕನ್ನಡಕ್ಕೆ ಅನುವಾದ ಮಾಡಿದ್ಲು: ‘ಹದಿನೈದು ರೂಪಾಯಿಯಿಂದ ಹಿಡ್ದು ಹೆಚ್ಚಂದ್ರೆ ನೂರು ರೂಪಾಯಿಯವರ್ಗೂ ಗಿರಾಕಿಗಳು ಬರ್ತಾರೆ’. ಚೌಕಾಸಿ ಮಾಡೋ ಚಾಲಾಕಿನ ಮೇಲೆ ಹಣ ನಿಗದಿಯಾಗುತ್ತೆ. ಇನ್ನು ಜಾಗ ಫ್ರೀ. ಉಳಿದ ಎಲ್ಲವೂ ನಿಸರ್ಗದತ್ತ!

‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್. ಗಿರಾಕಿಗಳು ಕಡಿಮೆ. ಆದ್ರೆ ಸೀಸನ್ ಮುಗಿಯೋವಾಗ ಗಿರಾಕಿಗಳ ಸುಗ್ಗಿ.  ಮೊದಮೊದಲು ಅಯ್ಯಪ್ಪನ ವೇವ್ ಶುರುವಾದಾಗ ಮೂರು ತಿಂಗಳುಗಳ ಕಾಲ ಗಿರಾಕಿಗಳೇ ಕಡಿಮೆ ಆಗೋರು. ಎಷ್ಟೋ ಬಾರಿ ಆ ಅಯ್ಯಪ್ಪ ನಮ್ಮ ಹೊಟ್ಟೆ ಮೇಲೆ ಹೊಡೆದ್ಬುಟ್ಟೌನೆ. ಈಗೆಲ್ಲಾ ಆ ವ್ರತ ಕಡಿಮೆ ಆಗಿ, ಸ್ವಲ್ಪ ದುಡ್ಡು ಜಾಸ್ತಿ ಸಿಗುತ್ತೆ. ಇನ್ನು ಜಾತ್ರೆ, ವಿಶೇಷ ಪೂಜೆ, ಪಕ್ಷ- ಇಂಥಾ ಟೈಮಲ್ಲೆಲ್ಲಾ ಗಿರಾಕಿಗಳೇ ಜಾಸ್ತಿ ಇರ್ತಾರೆ. ಏನೇ ಇದ್ರೂ ನಾವು ಮಾತ್ರ ಹೀಗೆ’ ಅಂತ ಹೇಳ್ತಾ ಇದ್ಲು. ಅಷ್ಟೊತ್ತಿಗೆ ಗಿರಾಕಿ ಕಣ್ಣಿಗೆ ಬಿದ್ದ ಅನ್ಸುತ್ತೆ ಹಾಗೇ ಹೋದ್ಲು. ಬಟಾ ಬಯಲು, ಎಲ್ಲವೂ ಚಿತ್ರ ಬರೆದಂತೆ. ಏಳು ಮಲೆಗಳ ಆ ಲೇಯರ್ಗಳನ್ನು ನೋಡ್ತಾ ಹಾಗೇ ಕತ್ತೆತ್ತಿದೆ. ಅತ್ಯಂತ ಶ್ರೀಮಂತ ವೆಂಕಟ್ರಮಣನ ಮುಕುಟ ಹಿಂಭಾಗದಿಂದ ಕಾಣ್ತಾ ಇತ್ತು.

ಅದೇ ಯೋಚಿಸ್ತಾ ನಿಂತೆ. ಇಷ್ಟು ವರ್ಷಗಳು ಎಲ್ಲೆಲ್ಲಿ ಸುತ್ತಿ ಬಂದೆ. ಅಲ್ಲೆಲ್ಲ ಕಂಡದ್ದು ಪ್ರಕೃತಿ ಎಲ್ಲಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ, ಅಲ್ಲೆಲ್ಲಾ ಮಾನವನ ಭೂಗತ ಚಟುವಟಿಕೆಗಳು, ಪಾತಕ ಲೋಕದ ತಾಣಗಳು ಸಾಮಾನ್ಯವಾಗಿ ಇರುತ್ತವೆ. ಅದರೊಂದಿಗೇ ವೇಶ್ಯಾವಾಟಿಕೆಯೂ ಇರುತ್ತದೆ. (ಪಾತಕ ಲೋಕ ಮತ್ತು ವೇಶ್ಯಾವಾಟಿಕೆಯ ನಿಕಟತೆಯ ಬಗ್ಗೆ ಮುಂದೆ ಬರೆಯುತ್ತೇನೆ.) ಪ್ರಕೃತಿದತ್ತವಾದ ಬೆಟ್ಟಗುಡ್ಡಗಳು, ದಟ್ಟವಾದ ಕಾಡುಗಳು, ಸಮುದ್ರ ತೀರಗಳು, ನದಿ ದಂಡೆಗಳು…….ಹೀಗೆ ಇವುಗಳ ವೇಶ್ಯಾವಾಟಿಕೆಗೆ ಹೇಳಿ ಮಾಡಿಸಿದಂಥ ಜಾಗಗಳು. ಗಿರಾಕಿಗಳು ಹೆಚ್ಚು ದೊರೆಯುವ ಹಾಗೆಯೇ ನಿರ್ಭಯವಾದ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ಏಕಾಂತ. ಘಟ್ಟ ಪ್ರದೇಶ ಹೆದ್ದಾರಿಯೂ ಆಗಿ ದಟ್ಟವಾದ ಅರಣ್ಯವೂ ಇದ್ದಾಗ, ದಿನನಿತ್ಯ ನಿರಂತರವಾಗಿ ಓಡಾಡುವ ಸಾವಿರಾರು ಲಾರಿಗಳು ಹಾಗೂ ವಾಹನಗಳು ವಿಶ್ರಾಂತಿಗಾಗಿ, ಸ್ನಾನಕ್ಕಾಗಿ, ಊಟಕ್ಕಾಗಿ ವಿರಮಿಸುತ್ತವೆ. ಈ ಘಟ್ಟ ಪ್ರದೇಶದೊಂದಿಗೆ ಹರಿಯುತ್ತಿರುವ ನದಿಗಳ ತಪ್ಪಲಲ್ಲಿರುವ ಶಿರಾಡಿ ಘಾಟ್ ಕೂಡ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದೆ.
ಒಮ್ಮೆ ಆ ಅಡವಿಯೊಳಗೆ ಹೊಕ್ಕರೆ ಸಾಕು, ಎಲ್ಲವೂ ಪ್ರೈವೆಸಿಯೇ! ಆ ದಟ್ಟತೆ ಎಲ್ಲವನ್ನೂ ತನ್ನ ಒಡಲೊಳಗೆ ಮುಚ್ಚಿಕೊಂಡುಬಿಡುತ್ತದೆ.
ಅಲ್ಲಲ್ಲಿಯೇ ಮರಗಳ ಬುಡಗಳಲ್ಲಿ ಸಮತಟ್ಟಾದ ಜಾಗಗಳಲ್ಲಿ ತಮಗೆ ಅಗತ್ಯವಿರುವಷ್ಟು ಜಾಗವನ್ನು ಸಿದ್ಧಗೊಳಿಸಿಕೊಂಡಿರುತ್ತಾರೆ. ಎಲೆಗಳ ರಾಶಿಯನ್ನೇ ಹಾಸಿಗೆಯನ್ನಾಗಿಸಿಕೊಳ್ಳುತ್ತಾರೆ.

ನೂರಾರು ಅಡಿ ಎತ್ತರದಲ್ಲಿ ಹೆದ್ದಾರಿ. ಇಕ್ಕೆಲಗಳ ಅಡವಿಯ ಇಳಿಜಾರು. ಅದರೊಳಗೆ ಇಳಿದಿಳಿದು ಹೋದಂತೆ ಆಳದಲ್ಲಿ ತಣ್ಣಗೆ ಹರಿಯುತ್ತಿರುವ ನದಿಗಳು ಈ ಲೈಂಗಿಕ ವೃತ್ತಿ ಮಹಿಳೆಯರ ಬದುಕಿನೊಂದಿಗೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತವೆ.
ದಣಿದ ದೇಹ ಮನಸ್ಸುಗಳಿಗೆ ತನ್ನ ತಣ್ಣನೆಯ ಸ್ಪರ್ಶದೊಂದಿಗೆ ಮೈದಡವುತ್ತವೆ. ಅನೇಕ ಬಾರಿ ಪೊಲೀಸರಿಂದಲೋ, ಗಿರಾಕಿಗಳಿಂದಲೋ ರಕ್ತಸಿಕ್ತವಾಗುವುದು, ಘಾಸಿಗೊಳ್ಳುವುದು ಅತಿ ಸಾಮಾನ್ಯ. ಆಗೆಲ್ಲಾ ಅನಾಥ ಪ್ರಜ್ಞೆಯಿಂದ ಏಕಾಂಗಿಯಾಗಿ ಓಡಿಬಂದು ಈ ಪಾಪನಾಶಿನಿಯ ತೆಕ್ಕೆಗೆ ಬಿದ್ದುಬಿಡುತ್ತಾರೆ. ದುಗುಡಗಳು ಇಳಿಯುವವರೆಗೂ ಅಲ್ಲೇ ಅವಳ ಮಡಿಲಲ್ಲೇ ಇದ್ದುಬಿಡುತ್ತಾರೆ. ಕೆಲವೊಮ್ಮೆ ಮನಸ್ಸು ಉಲ್ಲಸಿತವಾದಾಗಲೂ ಕಾಲುಗಳನ್ನು ಇಳಿಬಿಟ್ಟು ಪಾಪನಾಶಿನಿಯ ಸ್ಪರ್ಶದೊಂದಿಗೆ ಪುಳಕಗೊಳ್ಳುತ್ತಾರೆೆ. ಬಹುಶಃ ಅವರು ಮಾನಸಿಕವಾಗಿ ರಿಫ್ರೆಶ್ ಆಗಲು ತೊಡಗಿಕೊಳ್ಳುವ ದಾರಿ.

‘ಗಣ್ಯರ’ ಮಗಳೊಬ್ಬಳು ಕಿಡ್ನಾಪ್ ಆದ್ಲು

-ಲೀಲಾ ಸಂಪಿಗೆ

ಹೀಗೊಂದು ಪಿ.ಪಿ.ನಗರ…
ಇಡೀ ಏರಿಯಾಕ್ಕೆ ಬೆಂಕಿ ಬಿದ್ದಿತ್ತು! ಉರಿ ಹೊಗೆಯಿರಲಿಲ್ಲ ಅಷ್ಟೇ. ಪೊಲೀಸರ ಬೂಟುಗಳು ಒಂದೊಂದು ತಡಿಕೆಗಳನ್ನು, ಬಾಗಿಲುಗಳನ್ನು ಒದ್ದು ಎಲ್ಲಾ ಬಟಾಬಯಲು ಮಾಡ್ತಿದ್ವು. ಪೋಲಿಸರ ಯೂನಿಫಾಮರ್ಿಗೆ ಸಿಟ್ಟು ನೆತ್ತಿಗೇರಿತ್ತು. ಅಲ್ಲಿದ್ದ ನೂರಾರು ಗುಡಿಸಲುಗಳು, ಆಫ್ಮನೆಗಳು, ಮಲ್ಟಿಸ್ಟೋರ್ಡ್ ಸೆಮಿ ಬಿಲ್ಡಿಂಗ್ಗಳು, ಮಹಡಿಯ ಪೋಸ್ ಕೊಡ್ತಿದ್ದ ಅಟ್ಟಣಿಗೆಗಳು… ಎಲ್ಲವೂ ಏಕಾಏಕಿಯಾಗಿ ಮಗುಚಿ ಬಿದ್ವು. ಮುರಿದು ಹೋದ ನೆಲೆಗಳಿಂದ ಹೊರಟ ಆರ್ತನಾದದಲ್ಲಿ ವೈರುಧ್ಯತೆಯಿತ್ತು. ಗಿರಾಕಿಗಳೊಂದಿಗೆ ಸಂಧಾನಕ್ಕಿಳಿದಿದ್ದ ಮಾಲಿಕರುಗಳು ಶಾಕ್ ಆದ್ರು, ಬೆತ್ತಲಾಗಿದ್ದ ದೇಹಗಳು ದಿಕ್ಕಾಪಾಲಾದ್ವು. ಎಲ್ಲಿಂದಲೋ ವ್ಯಾಪಾರ ಕುದುರಿಸಿ ಕರೆತರುತ್ತಿದ್ದ ಪಿಂಪ್ಗಳು ಓಟಕಿತ್ತರು. ಹೇಗೋ ಹೋರಾಡಿ ಜಾಗ ಹಿಡ್ದು ಅಲ್ಲಿಂದ ಇಲ್ಲಿಂದ ಹೊಂಚಿ ಒಂದು ಗೂಡುಕಟ್ಟಿ ಬಾಡಿಗೆಗೋ, ಲೀಸ್ಗೋ ಕೊಟ್ಟಿದ್ದವರೆಲ್ಲಾ ಲಬೋ ಲಬೋ ಅಂದ್ರು. ಗಂಟೆ ಲೆಕ್ಕದಲ್ಲಿ ಬಾಡಿಗೆ ಕೊಡ್ತಿದ್ದವರು ಕೈ ಕೈ ಹಿಸುಕ್ಕೊಂಡ್ರು. ಏನಾದ್ರೂ ಸರಿ ಈ ಘಟನೆ ತಪ್ಪಿಸೋಕೆ ಮರಿ ಪುಡಿ ಪುಡಾರಿಗಳೆಲ್ಲ ಪದರುಗುಟ್ಟಿದ್ರು.
ಅದೊಂದು ದುದರ್ಿನ! ಪಿ.ಪಿ.ನಗರದಲ್ಲಿಯ ಎಲ್ಲಾ ದಂಧೆಗಳೂ ರೇಡ್ ಆಗಿದ್ವು. ಇಡೀ ಏರಿಯಾನೇ ಕಫ್ಯರ್ೂ ಹಾಕ್ದಂಗಾಯ್ತು. ಹತ್ತಿ ಉರಿದಂಗೆ, ಸುನಾಮಿ ಬಂದಂಗೆ, ಎಲ್ಲವೂ ಲೂಟ್ ಆದಂಗೆ ಆಗಿಹೋಯ್ತು. ಎಲ್ಲಾ ಮಾಮೂಲಿಗಳೊಟ್ಟಿಗೆ ನಿರಾಳವಾಗಿಯೇ ದಂಧೆ ನಡೆಸುತ್ತಿದ್ದ ಪಿ.ಪಿ.ನಗರಕ್ಕೊಂದು ಇಂಥಾ ಬರಸಿಡಿಲು ಬಡಿಯೋಕೆ ಒಂದು ಬಲವಾದ ಕಾರಣವಿತ್ತು.


ನೆರೆ ರಾಜ್ಯದ ‘ಗಣ್ಯರ’ ಮಗಳೊಬ್ಬಳು ಕಿಡ್ನಾಪ್ ಆದ್ಲು. ಅವಳ ಹಿನ್ನಲೆ ಗೊತ್ತಿರದ ಪೆಕ್ರನೊಬ್ಬ ಎತ್ತಾಕ್ಕೊಂಡ್ಬಂದು ಈ ಪಿ.ಪಿ.ನಗರಕ್ಕೆ ಆ ಹುಡುಗಿಯನ್ನು ಮಾರಿಬಿಟ್ಟಿದ್ದ.
ಹುಡ್ಗಿಯನ್ನು ಪತ್ತೆ ಹಚ್ಚೋ ಕೆಲ್ಸ ಬಹಳ ಬಿರುಸಾಯ್ತು. ಮುಗ್ಧ, ಅಮಾಯಕ ಹುಡ್ಗೀರ್ನ ಸಾಗಿಸೋ ತಲೆಹಿಡುಕ ದಂಧೆಯ ಜಾಲವನ್ನು ಇಡೀ ದೇಶದಲ್ಲೆಲ್ಲಾ ಜಾಲಾಡಿದ್ರು. ಕಡೆಗೆ ಆ ಹುಡ್ಗಿ ಕನರ್ಾಟಕದ ಮಂಡ್ಯದ ಪಿ.ಪಿ.ನಗರದಲ್ಲಿರೋದು ಗೊತ್ತಾಯ್ತು. ಕೂಡಲೇ ಆ ಹುಡುಗಿಯನ್ನು ಅಲ್ಲಿಂದ ಪಾರುಮಾಡಿ ಆ ಗಣ್ಯರಿಗೆ ಒಪ್ಪಿಸಿದ್ರು. ದೇಶದಲ್ಲೆಲ್ಲಾ ಈ ಸುದ್ದಿ ತಲೆಬರಹವಾಯ್ತು. ಪಿ.ಪಿ.ನಗರ ಏಕಾಏಕಿ ಕುಖ್ಯಾತವಾಗಿಬಿಡ್ತು.
ಸ್ಥಳೀಯ ಪೊಲೀಸ್ ಇಲಾಖೆ, ಆಡಳಿತಗಳ ಮೇಲೆ ಎಲ್ಲರ ಕಣ್ಣು ಬಿತ್ತು. ಅಧಿಕಾರಿಗಳ ಮೇಲೆ ಕ್ರಮಗಳಾದ್ವು. ಇದರಿಂದ ಕುಪಿತಗೊಂಡ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ತಗೊಂಡ ತೀಮರ್ಾನದಿಂದಾಗಿ ಪಿ.ಪಿ.ನಗರಕ್ಕೆ ಬುಲ್ಡೋಜರ್ ಬಂತು!
ಅಷ್ಟೊತ್ತಿಗೆ ತಡಿಕೆ, ಬಾಗಿಲುಗಳು ತಳ್ಳಾಡಿದ್ವು, ‘ಏಯ್, ಪ್ರಾಣದ ಮೇಲೆ ಆಸೆ ಇದ್ರೆ ಆಚೆ ಬನ್ನಿ, ಹತ್ತು ನಿಮಿಷ ಟೈಮಷ್ಟೆ’ -ಮೆಗಾಫೋನ್ನಲ್ಲಿ ಅನೌನ್ಸ್ ಮಾಡಿದ್ರು. ಏನ್ ನಡೀತಿದೆ ಅನ್ನೊವಷ್ಟರಲ್ಲಿ ಬುಲ್ಡೋಜರ್ ಸ್ಟಾಟರ್್ ಆಗೇಬಿಡ್ತು. ಬೆಳಗಿನ ಜಾವ ಕೋಳಿ ಕೂಗೋ ಹೊತ್ಗೆ ಇಡೀ ಪಿ.ಪಿ.ನಗರ ಮುರಿದು ಮಲಗಿತ್ತು. ಅದೊಂದು ಪಾತಕಗಳ ಕೂಪ. ಕಳ್ಳಭಟ್ಟಿಯ ಗಡಂಗುಗಳು, ಜೂಜಾಟದ ಅಡ್ಡೆಗಳು ಅಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯ ದಂಧೆಗೆ ಇನ್ನೊಂದಷ್ಟು ಬಲಕೊಟ್ಟಿದ್ವು.
ಭಾರತದ ವೇಶ್ಯಾವಾಟಿಕೆಯ ನಿಟ್ಟಿನ ಇತಿಹಾಸದಲ್ಲಿ ಪಿ.ಪಿ.ನಗರದ ಕಥೆಯೂ ತೆರೆದುಕೊಳ್ಳುತ್ತದೆ. ಇಂಡಿಯಾದ ಅತ್ಯಂತ ಸುಂದರಿಯನ್ನು ದಂಧೆಗಿಳಿಸಿದ ಸ್ಥಳವಿದು. ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ರವಾನಿಸಲ್ಪಟ್ಟು ದಂಧೆ ನಡೆಸುತ್ತಿದ್ದ ಒಂದು ದೊಡ್ಡಜಾಲದ ಅಖಾಡವೇ ಅಲ್ಲಿತ್ತು. ನೂರಾರು ಗುಡಿಸಲುಗಳಲ್ಲಿ ಸಾವಿರಾರು ಹೆಣ್ಣುಗಳ ದೇಹಗಳು ಇಲ್ಲಿ ಸೇವೆಗೆ ಸರಕಾಗಿದ್ದವು. ಮೊದ ಮೊದಲು ಗುಡಿಸಲುಗಳಲ್ಲಿ ಆರಂಭವಾದ ದಂಧೆ ತಂದಿತ್ತ ಲಾಭ ಹೆಚ್ಚಾದಂತೆಲ್ಲಾ ಗೋಡೆಗಳು, ಮಾಡುಗಳು, ತಾರಸಿಗಳು ಬಂದವು. ತೀರಾ ಇತ್ತೀಚಿನವರೆಗೂ ಅಲ್ಲಿ ಈ ದಂಧೆ ಸುಸೂತ್ರವಾಗಿಯೇ ನಡೀತಿತ್ತು. ಅದೊಂದು ಘಟನೆ ಆ ದಿನ ನಡೆಯದಿದ್ದಲ್ಲಿ ಇಂದಿಗೂ ಕೂಡ ಅದು ಹೆಣ್ಣುಗಳ ಮಾರುಕಟ್ಟೆ ಕೇಂದ್ರವಾಗಿಯೇ ಇರುತ್ತಿತ್ತೇನೋ!

‘ಕಳಂಕಿತ’ ಲೇಬಲ್ ಮಧ್ಯೆ ನಾನು ಹೊಕ್ಕಾಗ …

ಲೀಲಾ ಸಂಪಿಗೆ


ಕೊನೆಗೂ ಬರೆಯೋಕೆ ಕುಳಿತೆ. ಗೆಳೆಯರ ಒತ್ತಾಸೆಯ ಮಜರ್ಿಯಲ್ಲಿ ಬರೆದಿಲ್ಲವೆಂದಲ್ಲ! ಈ ತಪ್ಪಿದ ಹಾದಿಯ ಪಯಣಿಗರ ಬಗ್ಗೆ ಬರೆಯುತ್ತಲೇ ಬಂದಿರುವೆ. ಪಾಚಿಗಟ್ಟಿದ ಜಾರುದಾರಿಯಲ್ಲಿ ಸಾವರಿಸಿ ನಿಲ್ಲಲೂ ಆಗದೆ, ಹಾಗೆಂದು ಜಾರದಿರಲೂ ಆಗದೆ ತತ್ತರಿಸಿದವರ ನೋವಿನ, ಅವಮಾನದ, ಹತಾಶೆಯ, ಸಂಕಟದ ಬದುಕುಗಳ ಒಂದಷ್ಟು ಹೆಪ್ಪಿನ ಬುತ್ತಿಯನ್ನು ನನ್ನೊಳಗೆ ಹುದುಗಿಸಿಟ್ಟುಕೊಂಡೇ ಬಂದಿರುವೆ. ಬುತ್ತಿ ಬಿಚ್ಚಿಕೊಳ್ಳಲಾರದೇ ‘ಒಂದಷ್ಟು’ ನನ್ನೊಳಗೇ ಹುದುಗಿಬಿಟ್ಟಿವೆ. ಹೆಪ್ಪುಗಟ್ಟಿವೆ. ನಿಮ್ಮೊಂದಿಗೆ ಹಂಚಿಕೊಳ್ಳುವ ತಪನೆಯಿದೆ.
ಸಂಸ್ಕೃತದ ಶಬ್ದ ‘ವೇಶ್ಯಾ’ ಶಬ್ದದ ಮೂಲದಿಂದ ಬಂದು ಜನಜನಿತವಾಗಿರುವ ವೇಶ್ಯೆ ಅಥವಾ ಇಂದಿನ ‘ಲೈಂಗಿಕ ವೃತ್ತಿ ಮಹಿಳೆ’ಯು ಅವರ ಬದುಕುಗಳಿಗೆ ಗಂಭೀರವಾದ ಹೊಣೆಯೊಂದನ್ನು ಹೊತ್ತು ಒಳಹೊಕ್ಕಿದೆ. ಆ ನಿಧರ್ಾರ ಮಡಿದ ದಿನ ಅದೆಂಥಾ ದುಗುಡ, ಭಯ, ದ್ವಂದ್ವ ಒಳಗೊಳಗೇ ಹುಟ್ಟಿದ ನಡುಕ, ನಿದ್ದೆಗೆಡಿಸಿ ಬೆಚ್ಚಿಸಿದ ಆ ರಾತ್ರೆಗಳು ನನ್ನೊಳಗೇ ಒಂದು ಸಂಘರ್ಷವನ್ನು ತೀವ್ರಗೊಳಿಸಿದ್ದವು.
ಇಟ್ಟ ಹೆಜ್ಜೆ ಹಿತೆಗೆಯಲಿಲ್ಲ. ಒಂದು ಸಣ್ಣ ಕಿಂಡಿಯೊಳಗಿಂದ ಪ್ರವೇಶಿಸಿ ಭಾರತಾದಾದ್ಯಂತ ತೆರೆದಿಟ್ಟಿರುವ ಆ ಜಾಲದೊಳಗೆ ಮೈಯ್ಯೆಲ್ಲಾ ಕಣ್ಣಾಗಿ ಒಳಹೊಕ್ಕೇ ಬಿಟ್ಟೆ.  ಒಂದು mental distance ಕಾಯ್ದುಕೊಳ್ಳದೇ ಹೋಗಿದ್ದರೆ ಇವತ್ತು ಇಷ್ಟು ಪ್ರಶಾಂತವಾಗಿ ಕುಳಿತು ಆ ಅನುಭವಗಳನ್ನು ನಿಮ್ಮ ಮುಂದೆ ಹರವಿಕೊಳ್ಳಲು ಆಗುತ್ತಿರಲಿಲ್ಲವೇನೋ!
ಲೈಂಗಿಕ ವೃತ್ತಿ, ವೇಶ್ಯೆ, ವೇಶ್ಯಾವಾಟಿಕೆ………. ಶತಶತಮಾನಗಳಿಂದಲೂ ಅದೆಂಥಾ ‘ಕಳಂಕಿತ’ ಹಣೆಪಟ್ಟಿ ಹೊತ್ತುಕೊಂಡೇ ಬರುತ್ತಿದೆ ಎಂಬುದು ನಿಮಗೇ ಗೊತ್ತು. ಅಂಥಾ ‘ಕಳಂಕಿತ’ ಲೇಬಲ್ ಮಧ್ಯೆ ನಾನು ಹೊಕ್ಕಾಗ ಆ ಕಳಂಕದ ನೆರಳು ನನ್ನನ್ನು ಹಿಂಬಾಲಿಸದೇ ಬಿಟ್ಟಿಲ್ಲ. ನನ್ನ ಸುತ್ತಲಿನ ಬದುಕು, ಸಮಾಜ ನನ್ನನ್ನು ಗುರುತಿಸಿದ ರೀತಿ, ಅವರು ನನ್ನನ್ನು ಸ್ವೀಕರಿಸುವ ಪ್ರಕ್ರಿಯೆಯಲ್ಲಿ ನಾನನುಭವಿಸಿದ್ದು ಎಲ್ಲವೂ ಹೆಪ್ಪುಗಳೇ!
”ಸಾರ್, ವೇಶ್ಯಾವಾಟಿಕೆ ಬಗ್ಗೆ ನಾನು ಪಿಹೆಚ್.ಡಿ ಮಾಡ್ಬೇಕೂಂತ ಇದ್ದೀನಿ, ಅವರು ಹಾಗೆ, ಹೀಗೆ ಅವರ ಬದುಕುಗಳ ಸಂಕೀರ್ಣತೆಗಳು, ಸಂಕಷ್ಟಗಳು, ನಿಗೂಢಗಳು…….” ಹೀಗೆ ಮೈಮೇಲೆ ಬಂದವಳಂತೆ ಒದರುತ್ತಿದ್ದೆ. ಎಲ್ಲವನ್ನೂ ಕೇಳಿಸಿಕೊಂಡು ತಮ್ಮ ಕುತೂಹಲಗಳು ತಣಿದ ಮೇಲೆ ಏನಾದ್ರೂ ನೆಪ ಹೇಳಿ ನನ್ನನ್ನು ಸಾಗಿ ಹಾಕಿದ ಅದೆಷ್ಟೋ ಗೈಡ್ಗಳು ನನ್ನ ಕಣ್ಮುಂದೆ ಇದಾರೆ. ಪಾಪ, ಅವರಿಗೆ ಅದ್ಯಾವ ಪರಿಮಿತಿಗಳು, ಆತಂಕಗಳು, ಹಿಂಜರಿತಗಳು ಅಡ್ಡಿ ಬರುತ್ತಿದ್ದವೋ ಕಾಣೆ.
ಸರಿ, ಈ ಗಂಡಸರಾದ್ರೆ ಹಿಂಜರಿತಾರೆ. ಹೆಂಗಸರಾದ್ರೆ! ಅಂತ ಮತ್ತದೇ ರಿಹರ್ಸಲ್ ಮಾಡಿದಾಗ ಟಿಪಿಕಲ್ಲಾಗಿ `ಅವರು ಈ ವೃತ್ತೀನೆ ಯಾಕೆ ಮಾಡ್ಬೇಕು? ಬಿಟ್ಟು ಬಂದು ಬೇರೆ ಕೆಲ್ಸ ಮಾಡ್ಲಿ ಹೇಳು? ಹಾಗಂತ ಎಲ್ರೂ ವೇಶ್ಯಾವೃತ್ತೀನೇ ಮಾಡ್ತಾರಾ?’ ಮುಖ ಗಂಟಿಕ್ಕಿ ಈ ಪ್ರಶ್ನೆಗಳನ್ನು ನನ್ನ ಮೇಲೇ ಒಗೆದಾಗ ‘ಥೂ ಕೆಲ್ಸ ಕೆಡ್ತು’ ಅಂದ್ಕೊಂಡು ಮತ್ತೊಂದು ಹುಡುಕಾಟ ಅಣಿಯಾಗ್ತಿದ್ದೆ. 
ಇನ್ನೂ ಕೆಲವರು ನಾನು ಸಂಶೋಧಕಳೂ, ಮಹಾಪ್ರಬಂಧ ಮಂಡಿಸಬೇಕಾದವಳೂ ಅನ್ನೋದನ್ನು ಮರೆತು ಸಿಕ್ಕಿದ್ದೇ ಛಾನ್ಸು ಅಂತ ಆ ಹುಡ್ಗೀರ ಕೇಸ್ಸ್ಡಡೀಸ್ಗೆ ಅನುವಾಗಿಬಿಡ್ತಿದ್ರು.
ಅಬ್ಬಾ! ಅಂತೂ ಕೊನೆಗೂ ನನ್ನ ಗೈಡ್ ಸಿಕ್ಕಿಯೇ ಬಿಟ್ರು. ಅವರಿಗೆ ಮಾತ್ರ ಪ್ರಥಮ ಭೇಟಿಯಲ್ಲೇ ಕಥೇ ಹೇಳ್ಲಿಲ್ಲ. ಬೇರೆ ಗೈಡ್ಗಳ ಬಗ್ಗೆ ನನಗಾದ ಅನುಭವಗಳನ್ನು ಹೇಳಿಬಿಟ್ಟೆ. ನನ್ನ ಗೈಡ್ ಎಲ್ಲಾ ಕಳಂಕ, ತಾರತಮ್ಯಗಳ ಆತಂಕ ಮೀರಿ ಗೌರವಯುತವಾಗಿಯೇ ನನಗೆ ಮಾರ್ಗದರ್ಶನ ಮಾಡಿದರು ಅನ್ನೋದು ನನ್ನ ಹೆಮ್ಮೆ.


ಒಂದ್ಸಾರಿ ಹಾಸನಕ್ಕೆ ಹೊರಟಿದ್ದೆ, ಅಚಾನಕ್ಕಾಗಿ ವಿದ್ವಾಂಸರೂ, ಪ್ರಗತಿಪರರೂ, ಹಿರಿಯರೂ, ನನ್ನ ಆತ್ಮೀಯರೂ ಆಗಿದ್ದವರೊಬ್ಬರೂ ಬಸ್ಸಲ್ಲಿದ್ದರು. ಪಕ್ಕದಲ್ಲಿ ಕುಳಿತೆ. ಆಗತಾನೆ ಆಫ್ರಿಕಾದ ತರಬೇತುದಾರರು 18 ದಿನಗಳು ಕೊಟ್ಟ ತರಬೇತಿಯೊಂದನ್ನು ಮುಗಿಸಿ ಬಂದಿದ್ದೆ. ಅದು ಹೆಚ್ಐವಿ/ಏಡ್ಸ್ ನಿಯಂತ್ರಣ ಹೊಣೆಗಾರಿಕೆಯ ತರಬೇತಿಯಾಗಿತ್ತು. ಅದೇ ಉಮೇದಿನಲ್ಲಿದ್ದ ನಾನು ಮಾತಾಡಲು ಶುರುವಿಟ್ಟೆ. ಮೊದಮೊದಲು ಹೂಂಗುಟ್ಟಿದವರು ಹುಷಾರಾಗಿಬಿಟ್ರು. ಏಡ್ಸ್, ವೇಶ್ಯೆಯರು…ಶಬ್ದಗಳ ನಡುವೆ ತಮ್ಮನ್ನು ತಾವು ಬಚ್ಚಿಟ್ಟುಕೊಳ್ಳೋಕೆ ಹೆಣಗಾಡ್ತಿದ್ರು. ಕೊನೆಗೂ ತಮ್ಮ ಸೋಗಲಾಡಿ ಕಾಳಜಿ ಬಿಟ್ಟು ಮಡಿವಂತಿಕೆ ಕಚ್ಚೆ ಬಿಗಿ ಮಾಡ್ಕೊಂಡು, `ಇಲ್ಲೆಲ್ಲಾ ನನ್ನ ಪರಿಚಿತರು ಇದಾರೆ, ಒಂದ್ಸಾರಿ ಭೇಟಿಯಾಗಿ ಮಾತಾಡೋಣ’ ಅಂದ್ರು ನೋಡಿ; ನನಗೆ ಆಗ ಅರಿವಾಯ್ತು. ಓ ಇದು ಅತ್ಯಂತ ಉತ್ಕೃಷ್ಟ ಸಂಸ್ಕೃತಿಯ ದೇಶ. ಈಯಪ್ಪಾನೂ ಅದರ ವಾರಸುದಾರನೇ ಅಂತ. ಕೈಯ್ಯಲ್ಲಿದ್ದ `ಜಾಗತೀಕರಣದ ಸವಾಲುಗಳು’ ಪುಸ್ತಕ ತೆರೆದು ಕಣ್ಣಾಡಿಸುವವರಂತೆ ಸ್ತಬ್ಧರಾಗಿಬಿಟ್ರು, ಜಾಗತೀಕರಣದ ಗುತ್ತಿಗೆ ಹಿಡಿದವರಂತೆ!

 
`ಸಾರ್, ವೇಶ್ಯೆಯರ ಬಗ್ಗೆ ಒಂದು ಲೇಖನ ಬರ್ದಿದ್ದೀನಿ’ ಅಂತ ಪರಿಚಿತರೇ ಆದ ಹಿರಿಯ ಪತ್ರಕರ್ತರೊಬ್ಬರಿಗೆ ಹೇಳ್ದೆ. ಅವರನ್ನು ಕನ್ವಿನ್ಸ್ ಮಾಡೋಕೆ `ಸಾರ್, ಅವರ ವೇಷಭೂಷಣ, ಅವರ ಚಪ್ಪಲಿ, ಅವರು ಮುಡಿಯೋ ಹೂಗಳು, ಅವರ ನಡವಳಿಕೆಗಳು….’ ಹೀಗೆ ಸಾಗಿತ್ತು ನನ್ನ ಪ್ರಯತ್ನ. ಮೊದಲೇ ದೊಡ್ಡ ಪತ್ರಿಕೆ. ಇವರೋ ಹಿರಿಯ ಸಂಭಾವಿತರು! ನನ್ನ ಫೋನ್ ನಂಬರ್ ತೊಗೊಂಡ್ರು. ಮಾರನೇ ದಿನ ಸಂಜೆ ಅವರದ್ದೇ ಫೋನು. ಮೆಜೆಸ್ಟಿಕ್ ಹೋಟೆಲ್ ಒಂದರಲ್ಲಿ ಟೀ ಆರ್ಡರ್ ಮಾಡಿ ಕುಳಿತ್ವು. `ಹಾಂ, ಈಗ ಹೇಳು ಲೀಲ; ವೆರಿ ಇಂಟರೆಸ್ಟಿಂಗ್. ಅದೆಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಗಮನಿಸಿದ್ದೀಯ. ಅಂತವರ ಮಧ್ಯೆ ಹೇಗೆ ಪ್ರವೇಶ ಮಾಡ್ದೆ. ನನಗೆ ನಿನ್ನ ಸೂಕ್ಷ್ಮತೆ ಬಗ್ಗೆ ಆಶ್ಚರ್ಯ ಆಗ್ತಾ ಇದೆ…ಹೀಗೇ ವಿಷಯ ಬಿಟ್ಟು ನನ್ನ ಬಗ್ಗೆ ಆಲಾಪನೆ ಹೆಚ್ಚಾದಾಗ ನನಗರಿವಾಯ್ತು ಆ ಕಚ್ಚೆಹರುಕ ಮನಸ್ಸಿನ ಕಾಳಜಿ.

ಓದನ್ನು ಮುಂದುವರೆಸಿ